ವರ್ಷ ಬರೆದ ಕವನ ಮತ್ತು...
ನನ್ನ ಅತ್ತೆಯ ಮಗಳು ವರ್ಷ, ಹೊಸನಗರದ ರಾಮಚಂದ್ರಾಪುರ ಮಠದವರು ನಡೆಸುವ ಗುರುಕುಲದಲ್ಲಿ ವ್ಯಾಸಂಗ ಮಾಡುತ್ತಾಳೆ. ಈಗವಳು ಎಂಟನೇ ತರಗತಿ. ಇತ್ತೀಚೆಗೆಲ್ಲೋ ಅತ್ತೆ ಮನೆಗೆ ಫೋನಿಸಿದ್ದಾಗ ಪತ್ರಿಕೆಯೊಂದರಲ್ಲಿ ಪ್ರಕಟವಾದ ನನ್ನ ಕತೆಯ ಬಗ್ಗೆ ಮಾತನಾಡುತ್ತಾ ಅತ್ತೆ “ಏ ನಮ್ಮನೆ ಪುಟ್ಟಿಯೂ ಕವನ ಬರದ್ದೋ” ಎಂದಳು. ತಕ್ಷಣ excite ಆದ ನಾನು “ಓಹ್ ಎಂಥ ಬರದ್ಲೇ? ಓದಿ ಹೇಳು ನೋಡನ” ಎಂದೆ. ಆದರೆ ಅತ್ತೆ ಅದು ತನ್ನ ಬಳಿ ಈಗ ಇಲ್ಲವೆಂದೂ, ಈ ವಾರದಲ್ಲಿ ಒಮ್ಮೆ ಫೋನ್ ಮಾಡಿ ಕೊಡುವುದಾಗಿಯೂ ಹೇಳಿ ಫೋನಿಟ್ಟಳು.
ಹಾಗೆ ಆಶ್ವಾಸನೆಯಿತ್ತ ಅತ್ತೆ ಮತ್ತೆ ಫೋನ್ ಮಾಡಲೇ ಇಲ್ಲ. ಮೊನ್ನೆ ಕೆಂಡಸಂಪಿಗೆಯಲ್ಲಿ ‘ಮಕ್ಕಳ ಸಂಪಿಗೆ’ ಎಂಬ ಹೊಸ section ಶುರುವಾಗಿರುವುದು ಕಣ್ಣಿಗೆ ಬಿತ್ತು. ಅದಕ್ಕೆ ವರ್ಷ ಬರೆದ ಕವನವನ್ಯಾಕೆ ಕಳುಹಿಸಬಾರದು ಎಂಬಾಲೋಚನೆ ಬಂದು ಮತ್ತೆ ನಾನೇ ಅತ್ತೆ ಮನೆಗೆ ಫೋನಿಸಿದೆ. ಅದೃಷ್ಟಕ್ಕೆ ವರ್ಷಳಿಗೆ ಈಗ ರಜೆ ಶುರುವಾಗಿ ಮನೆಗೆ ಬಂದಿದ್ದರಿಂದ ಅವಳೇ ಫೋನಿಗೆ ಸಿಕ್ಕಿದಳು. ಹೆಂಗಿದ್ದೆ, ಏನು, ಎಂತು, ಎಷ್ಟ್ ದಿನ ರಜ, ಎಲ್ಲಾ ಮುಗಿದ ಮೇಲೆ “ಏಯ್ ಅದೆಂಥೋ ಕವನ ಬರದ್ಯಡಲೇ ನೀನು, ಕೊಡು ನೋಡನ, ನಾನು ಅದನ್ನ ಇಲ್ಲಿ publish ಮಾಡುಸ್ತಿ” ಅಂತ ಕೇಳಿದೆ.
ಸ್ವಲ್ಪ ಸಮಯದ ಬಳಿಕ ಫೋನಿಸಿದ ವರ್ಷ ತಾನು ಬರೆದ ಹನಿಗವನಗಳನ್ನು ಓದಿ ಹೇಳಿದಳು. ನಾನು ಬರೆದುಕೊಂಡೆ:
೧
ನನ್ನನ್ನು ಸೃಷ್ಟಿಸಿದ ಭಗವಂತ, ಸಾರಿ
ಬ್ರಹ್ಮಾಂಡವೆಂಬ ಮಾಯಾಜಾಲದಲಿ ಬಿದ್ದೆ ಜಾರಿ
ಅಲ್ಲಂತೂ ಸೋತುಹೋದೆ ಬಾರಿ ಬಾರಿ
ಮತ್ತೆ ನಿನ್ನಲ್ಲಿ ಬರಲು ಮರೆತೆ ದಾರಿ
೨
ರಂಗಾ, ನಾನೇನು ಮಾಡಿದೆ?
ನನ್ನನ್ನು ಏಕೆ ಭುವಿಗೆ ತಂದೆ?
ಈಗ ನೀನು ನನಗೆ ಕಾಣದಾದೆ
ಆದಷ್ಟು ಬೇಗ ನೀನು ದೊರಕಬಾರದೆ?
೩
ನಮ್ಮೆಲ್ಲರ ತಾಯಿ ಗೋವು
ಇದನ್ನು ರಕ್ಷಿಸಬೇಕು ನಾವು
ರಕ್ಷಿಸದಿದ್ದರೆ ಆಕೆಗಾಗುವುದು ನೋವು
ಆಕೆಗೆ ನೋವಾದರೆ ನಮಗೆ ಬರುವುದು ಸಾವು
* *
ವರ್ಷ ಬರೆದ ಕವನಗಳನ್ನು ಕೇಳಿ ನನಗೆ ಅದೆಷ್ಟು ತಲೆಬಿಸಿಯಾಯಿತೆಂದರೆ, “ಪುಟ್ಟೀ, ನೀನೀಗ ಎಷ್ಟನೇ ಕ್ಲಾಸು?” ಅಂತ ಮತ್ತೊಮ್ಮೆ confirm ಮಾಡಿಕೊಳ್ಳುವ ಸಲುವಾಗಿ ಕೇಳಿದೆ. “ಎಂಟು ಮಾರಾಯಾ” ಎಂದಳು. “ಸರಿ, ನಾನು ಮತ್ತೆ ಫೋನ್ ಮಾಡ್ತಿ” ಅಂತಂದು ಕಟ್ ಮಾಡಿಬಿಟ್ಟೆ. ಕೆಂಡಸಂಪಿಗೆಗೆ ಕಳುಹಿಸುವ ಆಲೋಚನೆಯನ್ನೇ ಕೈಬಿಟ್ಟೆ.
ನನಗೆ ಅದೆಷ್ಟು ಆತಂಕವಾಯಿತೆಂದರೆ, ಒಬ್ಬ ಎಂಟನೇ ತರಗತಿಯ ಹುಡುಗಿ ಬರೆಯಬಹುದಾದ ಕವನಗಳಾ ಇವು? ಹದಿಮೂರು-ಹದಿನಾಲ್ಕು ವರ್ಷ ವಯಸ್ಸಿನ ಹುಡುಗಿಯೊಬ್ಬಳು ಚಿಂತಿಸಬಹುದಾದ ವಿಷಯಗಳೇ ಅವಳ ಕವನದ ವಸ್ತು?
ಈಗ ಮೂರು ವರ್ಷದ ಹಿಂದೆ ವರ್ಷಳನ್ನು ಗುರುಕುಲಕ್ಕೆ ಸೇರಿಸುವ ಪ್ರಸ್ತಾಪ ಬಂದಾಗ object ಮಾಡಿದವರಲ್ಲಿ ನಾನೂ ಒಬ್ಬ. ಮಕ್ಕಳನ್ನು ಅಷ್ಟು ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿಯರಿಂದ ದೂರ ಮಾಡಿ ಬೇರೆಲ್ಲೋ ಇಟ್ಟು ಬೆಳೆಸುವುದು ಸರಿಯಲ್ಲ ಎಂಬುದು ನನ್ನ ವಾದವಾಗಿತ್ತು. ಮಕ್ಕಳು, ಕನಿಷ್ಟ ಹದಿನಾಲ್ಕು-ಹದಿನೈದು ವರ್ಷ ವಯಸ್ಸಿನವರೆಗಾದರೂ ಮನೆಯವರೊಂದಿಗೆ ಇದ್ದು ಬೆಳೆಯಬೇಕು. ತೀರಾ ಅನಿವಾರ್ಯವಿದ್ದರೆ ಸರಿ. ಊರಲ್ಲಿ ಓದಿಸಲಿಕ್ಕೆ ಅವಕಾಶವಿಲ್ಲದಿದ್ದರೆ, ಶಾಲೆ ಇಲ್ಲದಿದ್ದರೆ, ಅಥವಾ ಆರ್ಥಿಕ ದೌರ್ಬಲ್ಯ ಇದ್ದರೆ ಹೀಗೆ ಮಠದಲ್ಲಿ ಬಿಡುವುದೋ, ಯಾರಾದರೂ ಓದಿಸಲು ಮುಂದೆ ಬಂದರೆ ಅವರ ಮನೆಯಲ್ಲಿ ಬಿಡುವುದೋ, ಏನಾದರೂ ಮಾಡುವುದು ಅನಿವಾರ್ಯ.
ಆದರೆ ವರ್ಷಳ ಸಂದರ್ಭದಲ್ಲಿ ಅಂತಹ ಸಮಸ್ಯೆಯೇನೂ ಇರಲಿಲ್ಲ. ಅಲ್ಲದೇ ರಾಮಚಂದ್ರಾಪುರ ಮಠದ ಗುರುಕುಲವೂ ಅದಾಗ ತಾನೇ ಪ್ರಾರಂಭವಾಗಿದ್ದಾದ್ದರಿಂದ ನನಗಂತೂ ಅದರ ಕಾರ್ಯಕ್ಷಮತೆಯ ಬಗ್ಗೆ ಸಾಕಷ್ಟು ಅನುಮಾನಗಳಿದ್ದವು. ಅವನ್ನೆಲ್ಲ ಅತ್ತೆಯ ಬಳಿ ಹೇಳಿಕೊಂಡರೆ, ಅತ್ತೆ ಒಪ್ಪಲೇ ಇಲ್ಲ. “ಇಲ್ಲೆ, ಅಲ್ಲಿ high quality education ಕೊಡ್ತ್ವಡ. ಅಲ್ಲೇನು ಬಡವರ ಮಕ್ಕಳು ಮಾತ್ರ ಇಲ್ಲೆ; ತುಂಬಾ ಶ್ರೀಮಂತರು ಸಹ ತಮ್ಮ ಮಕ್ಕಳನ್ನ ಬಿಟ್ಟಿದ.. Free ಏನೂ ಅಲ್ಲ; fees ಕಟ್ಟವು. ತುಂಬಾ strict ಆಗಿ ನೆಡಸ್ತ್ವಡ. ವ್ಯವಸ್ಥೆಯೂ ಎಲ್ಲಾ ಚೊಲೋ ಇದ್ದಡ. ನಮ್ಮಲ್ ಇವ್ರು (ಅಂದರೆ ನನ್ನ ಮಾವ) ಹೋಗಿ ನೋಡ್ಕ್ಯಂಡ್ ಬೈಂದ. ಮೊದ್ಲು parents interview ಸಹ ತಗಳ್ತ್ವಡ. ನಮ್ಮನೆ ಕೂಸಿನ್ನ ಸೇರ್ಸದೇ ಸೈ” ಎಂದಳು. ಅಷ್ಟೆಲ್ಲಾ ಇದ್ದಮೇಲೆ ಚೆನ್ನಾಗಿಯೇ ಇರಬಹುದು ಅಂತ ನಾನೂ ಸುಮ್ಮನಾದೆ.
ಅದಾಗಿ ಒಂದು ವರ್ಷದ ನಂತರ ನಾನೊಮ್ಮೆ ಊರಿಗೆ ಹೋಗಿದ್ದಾಗ, ಅಮ್ಮನೊಂದಿಗೆ ಮಠಕ್ಕೆ ಹೋಗುವ ಪ್ರಸಂಗ ಬಂತು. ’ಪುಟ್ಟಿಯನ್ನೂ ನೋಡಿದಂತಾಯಿತು’ ಅಂತ ನಾನೂ ಖುಶಿಯಿಂದಲೇ ಹೊರಟೆ. ಮಠ ತಲುಪಿ, ಗುರುಕುಲ ಎಲ್ಲಿದೆ ಅಂತ ಹುಡುಕಿ ಹೊರಟರೆ ಅಲ್ಲಿ ಏನಿದೆ? ಗುಡಿಸಲುಗಳಂತೆ ಕಟ್ಟಿ ಬಿಸಾಕಿದ ಐದಾರು ಶೆಡ್ಡುಗಳು. ಪಂಚೆ ಉಟ್ಟು, ಶಲ್ಯ ಹೊದ್ದು, ವಿಭೂತಿ ಬಳಿದುಕೊಂಡು ವಟುಗಳಂತೆ ಅಲ್ಲಿಂದಿಲ್ಲಿಗೆ ಓಡಾಡಿಕೊಂಡಿರುವ ಒಂದಷ್ಟು ಗಂಡು ಮಕ್ಕಳು. ಲಂಗ-ದಾವಣಿ ಧರಿಸಿ ಓಡಾಡುತ್ತಿರುವ ಹೆಣ್ಣು ಮಕ್ಕಳು.. ’ಇಲ್ಲಿ ವರ್ಷ ಅನ್ನೋ ಹುಡುಗಿ ಎಲ್ಲಿರ್ತಾಳೆ?’ ಅಂತ ಯಾರೋ ಹುಡುಗರನ್ನು ಕೇಳಿದೆವು. ಅವರು ಒಂದು ಗುಡಿಸಲನ್ನು ತೋರಿಸಿದರು. ಹಿಂದಿನ ದಿನ ಜೋರು ಮಳೆ ಹೊಯ್ದಿದ್ದರಿಂದ ಅಲ್ಲೆಲ್ಲಾ ಪೂರ್ತಿ ಕೆಸರಿತ್ತು. ಉಟ್ಟಿದ್ದ ನನ್ನ ಬಿಳಿ ಪಂಚೆ ಕೊಳೆಯಾಗದಂತೆ ಕಷ್ಟ ಪಟ್ಟು ಕಾಲಿಡುತ್ತಾ ಆ ಗುಡಿಸಲನ್ನು ಪ್ರವೇಶಿಸಿದೆವು.
ವರ್ಷ ಎದುರಿಗೇ ಸಿಕ್ಕಿಬಿಟ್ಟಳು. ತನ್ನ ಸಹಪಾಠಿಯೊಬ್ಬಳಿಗೆ ಜಡೆ ಹೆಣೆಯುತ್ತ ಕೂತಿದ್ದಳು. ನಮ್ಮ ಅನಿರೀಕ್ಷಿತ ಆಗಮನದಿಂದ ವರ್ಷ ಆಶ್ಚರ್ಯಗೊಂಡಳು. ಆ ಗುಡಿಸಲಿನಲ್ಲಿ ಇದ್ದುದು ಒಂದೇ ಕೊಠಡಿ. ಕೊಠಡಿಯ ಒಂದು ಗೊಡೆಗೆ ನೇತುಬಿಟ್ಟಿದ ಬೋರ್ಡು. ಮತ್ತೊಂದು ಗೋಡೆಗೆ ಹೊಂದಿಸಿಟ್ಟಿದ್ದ ಕಬ್ಬಿಣದ ಸ್ಟ್ಯಾಂಡುಗಳು -ಮಕ್ಕಳ ಪುಸ್ತಕ, ಊಟದ ತಟ್ಟೆಗಳು, ಇತ್ಯಾದಿಗಳು ಆ ಸ್ಟ್ಯಾಂಡಿನಲ್ಲಿ. ಕೊಠಡಿಯ ಮತ್ತೊಂದು ಮೂಲೆಯಲ್ಲಿ ಟ್ರಂಕುಗಳು. ಮಕ್ಕಳು ತಮ್ಮ ತಮ್ಮ ಮನೆಯಿಂದ ತಂದವು. ಅದರಲ್ಲಿ ಅವರ ಬಟ್ಟೆಬರೆಗಳು. ಒಂದೇ ಕೋಣೆಯಲ್ಲಿ ಊಟ, ಪಾಠ, ವಸತಿ -ಎಲ್ಲಾ. ಇನ್ನೂ ಪೂರ್ತಿ ಕಟ್ಟಿಯೇ ಆಗಿರದಿದ್ದ ಗುಡಿಸಲಿನ ಕಿಟಕಿಗಳಿಗೆ ಇನ್ನೂ ಚೌಕಟ್ಟು-ಸರಳುಗಳನ್ನು ಕೂರಿಸಿರಲಿಲ್ಲ. ಗುಡಿಸಲಿನ ಗೋಡೆಯನ್ನು ಸುಮಾರು ಏಳು ಅಡಿಗಳವರೆಗೆ ಕಟ್ಟಿದ್ದರು; ಅದರ ಮೇಲೆ ಮೂರ್ನಾಲ್ಕು ಅಡಿ ಹಾಗೇ gap ಬಿಟ್ಟಿದ್ದರು. ಮೇಲೆ cement sheet ಹೊಚ್ಚಿದ್ದರು. ಸಿಡಿಲು-ಗಾಳಿ-ಮಳೆ ಅಂತ ಏನಾದರೂ ಬಂದರೆ ಒಳಗಿರುವವರ ಗತಿ ಏನಾಗಬಹುದೆಂದು ಕಲ್ಪಿಸಿಕೊಂಡು ನಾನು ತತ್ತರಿಸಿ ಹೋದೆ. ‘ಮಠಕ್ಕೆ ಅಷ್ಟೆಲ್ಲಾ ದುಡ್ಡು ಬರ್ತು, ವ್ಯವಸ್ಥೆನಾದ್ರೂ ಸರಿಯಾಗಿ ಮಾಡಕ್ಕಾಗದಿಲ್ಯಾ?’ ಅಂತ ಸಿಟ್ಟಿನಲ್ಲಿ ನಾನೂ ಅಮ್ಮನ ಬಳಿ ಯಾವುದೋ ಪತ್ರಿಕೆಯವರ ದನಿಯಲ್ಲಿ ಗೊಣಗಿಕೊಂಡುಬಿಟ್ಟೆ. ಮಕ್ಕಳನ್ನು ಹೀಗೆ ಒಂದೇ ಕೋಣೆಯಲ್ಲಿ ಕೂಡಿ ಹಾಕಿಬಿಟ್ಟರೆ ಹೇಗೆ? ಸ್ವಲ್ಪವಾದರೂ ಲವಲವಿಕೆ ಬೇಡವೇ?
ಮನೆಯಲ್ಲಿ ತಂದೆ-ತಾಯಿ-ಅಜ್ಜ-ಅಜ್ಜಿ-ತಮ್ಮ ಎಲ್ಲರ ಜೊತೆ ಇದ್ದುಕೊಂಡು, ಬೆಳಗ್ಗೆ ಮುಂಚೆ ಎದ್ದು ಸ್ವಲ್ಪ ಹೊತ್ತು ಓದಿಕೊಂಡು, ಸ್ನಾನ ಮಾಡಿ ತಿಂಡಿ ತಿಂದು, ಊರ ಮಕ್ಕಳೊಂದಿಗೆ ಶಾಲೆಗೆ ಹೋಗಿ, ಸಾಲಾಗಿ ನಿಂತು ಪ್ರಾರ್ಥನೆ ಮಾಡಿ, ಬೆಳಗಿನಿಂದ ಸಂಜೆಯವರೆಗೆ ಪಾಠ ಕೇಳಿ, ಆಟವಾಡಿ, ಶಾಲಾ ಆವರಣದ ಕಸ ಹೆಕ್ಕಿ, ಮಧ್ಯ ಕಟ್ಟಿಕೊಂಡು ಹೋಗಿದ್ದ ಬುತ್ತಿಯನ್ನು ಉಂಡು, ಸಂಜೆ ಹೊತ್ತಿಗೆ ಗೆಳೆಯರೊಂದಿಗೆ ಕೂಗಾಡುತ್ತಾ, ಕೌಳಿ ಹಣ್ಣು - ನೇರಳೆ ಹಣ್ಣು ಅಂತ ತಿನ್ನುತ್ತಾ ಮನೆಗೆ ಬಂದು, ತಡವಾದುದಕ್ಕೆ ಅಮ್ಮನ ಬಳಿ ಬೈಸಿಕೊಂಡು, ಕೈಕಾಲು ತೊಳೆದುಬಂದು ಅವಲಕ್ಕಿ-ಮೊಸರು ತಿಂದು, ದೇವರ ಮುಂದೆ ಕೂತು ಭಜನೆ ಮಾಡಿ, ಓದಿಕೊಂಡು - ಹೋಮ್ ವರ್ಕ್ ಮಾಡಿಕೊಂಡು, ಊಟದ ಸಮಯದಲ್ಲಿ ಅಮ್ಮನಿಗೆ ಸ್ವಲ್ಪ ಸಹಾಯ ಮಾಡಿಕೊಂಡು ಊಟ ಮಾಡಿ, ಟೀವಿ ನೋಡುತ್ತಾ ಹಾಗೇ ತೂಕಡಿಕೆ ಬಂದು, ಮೆತ್ತಿಗೆ ಹೋಗಿ ಬೆಚ್ಚನೆ ಹಾಸಿಗೆಯಲ್ಲಿ ಮಲಗಿ ನಿದ್ರೆ ಹೋಗಿ... ... ವರ್ಷ ಇವೆಲ್ಲವನ್ನೂ miss ಮಾಡಿಕೊಳ್ಳುತ್ತಿದ್ದಾಳಲ್ಲ ಎನಿಸಿ ಬೇಜಾರಾಯಿತು.
ಮಠದ ವ್ಯವಸ್ಥೆಯನ್ನೂ, ಪುಟ್ಟಿಯನ್ನೂ ನೋಡಿ ತುಂಬಾ ಸಂಕಟವಾಯಿತು. ಅಲ್ಲಿದ್ದ ಮಕ್ಕಳೆಲ್ಲ ತೀರಾ ಅನಾಥ ಮಕ್ಕಳಂತೆ ಕಾಣಿಸುತ್ತಿದ್ದರು. ನಾವು ಹೋಗುವಾಗ ವರ್ಷಳಿಗೆಂದು ಒಂದಷ್ಟು ಹಣ್ಣು, ಬಿಸ್ಕೆಟ್ಸು, ಚಾಕಲೇಟ್ಸು ತೆಗೆದುಕೊಂಡು ಹೋಗಿದ್ದೆವು. ಎಲ್ಲರಿಗೂ ಹಂಚಿಕೊಂಡು ತಿನ್ನಬೇಕಾಗಬಹುದೆಂದು ಏಳೆಂಟು ಬಿಸ್ಕೇಟ್ ಪ್ಯಾಕೇ ತಗೊಂಡು ಹೋಗಿದ್ದೆವು. ಅದನ್ನು ಹೊರತೆಗೆದು ಕೊಡಲು ಹೋದರೆ ವರ್ಷ ಸ್ವೀಕರಿಸಲೇ ಇಲ್ಲ. ’ಇಲ್ಲಿ ಚಾಕ್ಲೇಟು ಬಿಸ್ಕೇಟು ಏನೂ ತಿನ್ನೋ ಹಾಗಿಲ್ಲ’ ಎಂದಳು. ’ಅದ್ಯಾಕೆ ಹಾಗೆ?’ ಅಂತ ಕೇಳಿದೆ. ’ಅಂಗಡಿಯಲ್ಲಿ ಸಿಗುವ ಸಿದ್ಧ ಆಹಾರಗಳ್ಯಾವುದನ್ನೂ ತಿನ್ನುವ ಹಾಗಿಲ್ಲ. ಅವೆಲ್ಲಾ ಪೇಟೆ ತಿನಿಸುಗಳು; ನಮ್ಮ ಸಂಕೃತಿಗೆ ಹೊಂದುವುದಿಲ್ಲ ಅಂತ ಗುರೂಜಿ ಹೇಳಿದ್ದಾರೆ’ ಎಂಬ ಉತ್ತರ ಬಂತು. ನಾನು ನಿಬ್ಬೆರಗಾಗಿ ಹೋದೆ. ಪುಟ್ಟಿ ನಮ್ಮ ಜೊತೆ ಸರಿಯಾಗಿ ಮಾತನಾಡಲೇ ಇಲ್ಲ. ಆಕೆಗೆ ಹಾಗೆ ನಾವು ಅವಳಿರುವಲ್ಲಿಗೆ ಹೋದದ್ದು ಇಷ್ಟವಾಗಲಿಲ್ಲವೇನೋ ಎನಿಸಿ, ಸ್ವಲ್ಪ ಹೊತ್ತಷ್ಟೇ ಇದ್ದು ನಾವು ವಾಪಸು ಬಂದೆವು: ಬಿಸ್ಕೇಟು-ಚಾಕ್ಲೇಟುಗಳ ಸಮೇತ.
ಊರಿಗೆ ಬಂದವನೇ ಅತ್ತೆಗೆ ಫೋನ್ ಮಾಡಿ ಇಂಥಾ ಕಡೆ ಪುಟ್ಟಿಯನ್ನು ಬಿಟ್ಟಿರುವುದಕ್ಕಾಗಿ ಸರಿಯಾಗಿ ಬೈದೆ. ನನ್ನ ಅಸಮಾಧಾನವನ್ನೆಲ್ಲ ಸಾವಧಾನದಿಂದ ಕೇಳಿದ ಅತ್ತೆ ‘ಅದನ್ನೆಲ್ಲಾ ವ್ಯವಸ್ಥಿತವಾಗಿ ಮಾಡ್ತ.. ಇನ್ನೊಂದು ಐದಾರು ತಿಂಗಳು ಅಷ್ಟೇ. ಮಠದವರು ಹೇಳಿದ್ದ’ ಎಂದಳು.
ಮತ್ತೊಮ್ಮೆ ಊರಿಗೆ ಹೋಗಿದ್ದಾಗ ರಜೆಗೆಂದು ನಮ್ಮ ಮನೆಗೆ ಬಂದಿದ್ದ ಪುಟ್ಟಿ ಸಿಕ್ಕಳು. ಈ ಬಾರಿ ಅವಳನ್ನು ಕೂರಿಸಿಕೊಂಡು ಮಠದಲ್ಲಿ ಏನೇನು ಕಲಿಸುತ್ತಿದ್ದಾರೆ, ಅಲ್ಲಿಯ ಪಠ್ಯಕ್ರಮವೇನು, ಪಾಠ-ಪ್ರವಚನವೆಲ್ಲಾ ಹೇಗೆ ನಡೆಯುತ್ತಿದೆ, ಎಂದೆಲ್ಲ ಕೇಳಿದೆ. ಬೆಳಗ್ಗೆ ನಾಲ್ಕು ಗಂಟೆಗೆ ಮಕ್ಕಳನ್ನೆಲ್ಲಾ ಎಬ್ಬಿಸುತ್ತಾರಂತೆ. ಎದ್ದಕೂಡಲೇ ಧ್ಯಾನ, ಆಮೇಲೆ- ಶೌಚ, ಉಪಹಾರ, ಪ್ರಾರ್ಥನೆ, ಪ್ರದೇಶ ಸ್ವಚ್ಚತೆ, ಪಾರಾಯಣ, ಪ್ರವಚನ, ಭೋಜನ, ವಿಶ್ರಾಂತಿ, ಪಾಠ, ಆಟ, ಭಜನೆ, ವ್ಯಾಸಂಗ, ಊಟ, ಫಲ, ನಿದ್ರೆ... “ಓಹ್! ನಿನ್ನ ಪಟ್ಟಿಯಲ್ಲಿ ಪಾಠ-ಓದು-ಬರಹಕ್ಕಿಂತ ಭಜನೆ, ಪಾರಾಯಣಗಲೇ ಜಾಸ್ತಿ ಇದ್ದಲೇ ಮಾರಾಯ್ತಿ?” ಅಂತ ತಮಾಶೆ ಮಾಡಿದೆ. ಮನೆಗೆ ವರ್ಷ ಬಂದಿದ್ದಾಳೆಂದು ಅವಳಿಗಿಷ್ಟವಾಗುವ ವಿಶೇಷ ಅಡುಗೆಯನ್ನೇನಾದರೂ ಮಾಡೋಣ ಅಂತ ಅಮ್ಮ ಅವಳ ಬಳಿ ಕೇಳಿದರೆ ‘ಅಯ್ಯೋ ಅದು ತಾಮಸ ಗುಣ; ಇದು ರಾಜಸ ಗುಣ; ಅದು ಬ್ಯಾಡ; ಇದನ್ನ ತಿನ್ನಲಾಗ’ ಎಂದೆಲ್ಲಾ ಹಲುಬಲು ಶುರು ಮಾಡಿದಳು. ‘ಕೂಸೇ ನಿಂಗೆ ತಲೆ ಕೆಟ್ಟಿದ್ದು’ ಅಂತ ಬೈದೆ.
ಮಠದಲ್ಲಿ ಹೆಣ್ಣುಮಕ್ಕಳಿಗೆ ಮುಖ್ಯವಾಗಿ ಕಲುಹಿಸುತ್ತಿರುವುದು ಅಂಗಳ ಸಾರಿಸುವುದು, ಕಟ್ಟಿಗೆ ತರುವುದು, ಮನೆ-ಆವರಣವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು, ರಂಗೋಲಿ ಹಾಕುವುದು, ಜಡೆ ಹೆಣೆದುಕೊಳ್ಳುವುದು, ಭಜನೆ ಮಾಡುವುದು, ಧ್ಯಾನ ಮಾಡುವುದು, ಇತ್ಯಾದಿ. ಅವರ final ಉದ್ದೇಶ ಹೆಣ್ಣು ಮಕ್ಕಳನ್ನು ಉತ್ತಮ ಗೃಹಿಣಿಯರನ್ನಾಗಿ ಮಾಡುವುದು; ಗಂಡು ಮಕ್ಕಳನ್ನು ಸುಸಂಕೃತರನ್ನಾಗಿ ಮಾಡುವುದು. ಅದಕ್ಕೇ ಮಠವೇ ಆಗಬೇಕಾ? ಗುರುಕುಲದಲ್ಲಿ ಕೂಡಿ ಹಾಕಿಯೇ ಹೇಳಿಕೊಡಬೇಕಾ? ಮನೆಯ ಪರಿಸರದಲ್ಲೇ, ಅಪ್ಪ-ಅಮ್ಮರ ಜೊತೆಯಲ್ಲೇ ಇದ್ದು ಕಲಿಯಲಿಕ್ಕಾಗುವುದಿಲ್ಲವಾ? ನನ್ನ ಪ್ರಶ್ನೆಗೆ ಅತ್ತೆ ಸಮರ್ಪಕವಾದ ಉತ್ತರ ಕೊಡುವುದಿಲ್ಲ. ‘ಇಲ್ಲ, ಮಠದವರು ಭರವಸೆ ಕೊಟ್ಟಿದಾರೆ. ಅಲ್ಲಿರುವ ಮಕ್ಕಳು ಹತ್ತನೇ ತರಗತಿ ಮುಗಿಸಿ ಹೊರಬೀಳುವಾಗ ಯಾವುದೇ ಬೆಂಗಳೂರಿನ standard school ನ ಮಕ್ಕಳಿಗಿಂತ ಕಡಿಮೆಯೇನೂ ಇಲ್ಲದಂತೆ ತಯಾರಾಗಿರುತ್ತಾರೆ ಅಂತ. ನೋಡುವಂತೆ ನೀನು’ ಎನ್ನುತ್ತಾಳೆ ಅತ್ತೆ. ಈಗ ಅಲ್ಲಿ ಇಂಗ್ಲೀಷಿನಲ್ಲಿ ಮಾತನಾಡುವುದನ್ನು ಹೇಳಿಕೊಡುತ್ತಿದ್ದಾರಂತೆ, ಕಂಪ್ಯೂಟರ್ ಕಲುಹಿಸುತ್ತಿದ್ದಾರಂತೆ.
ಆದರೆ ವರ್ಷಳ ಭವಿಷ್ಯದ ಬಗ್ಗೆ ನನ್ನ ಆತಂಕವಂತೂ ಸ್ವಲ್ಪವೂ ಕಮ್ಮಿಯಾಗಿಲ್ಲ. ಅವಳು ಓದಿಕೊಂಡು ಮುಂದೇನೋ ಡಾಕ್ಟರೋ ಇಂಜಿನಿಯರೋ ಆಗದಿದ್ದರೆ ಇಲ್ಲ; ಆದರೆ ಮಠದಿಂದ ಹೊರಬಿದ್ದಮೇಲೆ ಈ ಮುಂದುವರೆದಿರುವ ಜಗತ್ತಿನೊಂದಿಗೆ ಹೊಂದಿಕೊಳ್ಳಲಿಕ್ಕಾದರೂ ಅವಳಿಂದ ಆದೀತೇ ಎಂಬ ಅನುಮಾನ ನನ್ನದು.
ರಾಮಚಂದ್ರಾಪುರ ಮಠ, ರಾಘವೇಶ್ವರ ಭಾರತೀ ಸ್ವಾಮಿಗಳ ಪೀಠಾರೋಹಣದ ನಂತರ ಪಡೆದ ಪ್ರಸಿದ್ಧಿ ಎಲ್ಲರಿಗೂ ಗೊತ್ತಿರುವುದೇ. ರಾಘವೇಶ್ವರರು ಹಾಕಿಕೊಂಡಿರುವ ಯೋಜನೆಗಳು, ಅವರ ಕನಸುಗಳು, ಆದರ್ಶಗಳು, ಗೋವಿಗಾಗಿ ಸಮರ -ಎಲ್ಲಾ ಬಹಳ ದೊಡ್ಡವಿವೆ. ನನಗೂ ಅವುಗಳ ಬಗ್ಗೆ ಗೌರವವಿದೆ. ಜನಗಳೆಲ್ಲಾ ಸಹಕರಿಸಿ ಅವೆಲ್ಲಾ ಸಾಕಾರಗೊಂಡದ್ದೇ ಹೌದಾದರೆ ಅದೊಂದು ಸಾಧನೆಯೇ. ಮಠದ ಪ್ರಸಿದ್ಧಿಯಿಂದಾಗಿಯೇ ಅಲ್ಲಿಗೆ ’ನಡೆದುಕೊಳ್ಳುವವರ’ ಸಂಖ್ಯೆಯೂ ಜಾಸ್ತಿಯೇ ಇದೆ. ಅಂಥವರು ತಮ್ಮ ಮಕ್ಕಳನ್ನು ತಂದು ಗುರುಕುಲದಲ್ಲಿ ಬಿಡುವುದೂ ಸಾಮಾನ್ಯ. ಮಠ ಅನೇಕ ವಿವಾದಗಳಿಗೆ ಸಹ ಗುರಿಯಾಗಿದೆ. ಈಗ ಅದನ್ನು ಮತ್ತೊಂದು ವಿವಾದಕ್ಕೆ ತಳ್ಳುವುದು ನನ್ನುದ್ದೇಶವೂ ಅಲ್ಲ. ಆದರೆ... ನನ್ನ ಪ್ರೀತಿಯ ವರ್ಷ ಪುಟ್ಟಿ ಹೀಗಾದ ಬಗ್ಗೆ ಯೋಚಿಸಿದಾಗ ಮಾತ್ರ ನನಗೆ ಸಂಕಟವಾಗುತ್ತದೆ. ಏನು ಮಾಡಬೇಕೆಂದೇ ತಿಳಿಯುವುದಿಲ್ಲ.
ಹಾಗಂತ ಇದು ಕೇವಲ ವರ್ಷ ಪುಟ್ಟಿಯ ಸಮಸ್ಯೆಯೂ ಅಲ್ಲವಂತೆ. ಅತ್ತೆ ಹೇಳಿದಳು, ಗುರುಕುಲ ಹೊರತಂದಿರುವ ‘ಪ್ರತಿಭಾ ಲೋಕ’ ಎಂಬ ಹೆಸರಿನ ಪುಸ್ತಕದಲ್ಲಿ ವರ್ಷಳ ಸಹಪಾಠಿಗಳೇನಕರು ಬರೆದ ಕವನ/ಬರಹಗಳ ದಾಟಿಯೂ ಹೀಗೆಯೇ ಇದೆ ಎಂದು. ನಾವು ಬೆಂಗಳೂರಿನ ಪಬ್ಬು-ನೈಟ್ಕ್ಲಬ್ಬುಗಳನ್ನೂ, ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯನ್ನೂ ನೋಡಿ ಬೈದುಕೊಳ್ಳುತ್ತಾ ‘where are we heading to?’ ಅಂತ ಕೇಳಿಕೊಳ್ಳುತ್ತೇವೆ ನಿಜ. ಆದರೆ ವರ್ಷಳ ಕವನ ಓದಿದಾಗಲೂ ನಾನು ಅದೇ ಪ್ರಶ್ನೆ ಕೇಳಿಕೊಳ್ಳಬೇಕಾಯಿತು ಎಂಬುದು ವಿಷಾದನೀಯ. ಎರಡೂ ಸಹ ‘too much’ ಎಂಬುದು ನನ್ನ ಅಭಿಪ್ರಾಯ.
ಮತ್ತೆ ನಾನು ಹೀಗೆಲ್ಲಾ ಬರೆದು ಪ್ರಕಟಿಸಿದ್ದೇನೆ ಎಂಬುದು ಗೊತ್ತಾದರೆ ವರ್ಷ, ಅತ್ತೆ, ಅತ್ತೆಯ ಮನೆಯವರು, ನನ್ನ ಅಪ್ಪ-ಅಮ್ಮ -ಎಲ್ಲರೂ ಬೇಜಾರ ಮಾಡಿಕೊಳ್ಳುತ್ತಾರೆ, ನನಗೆ ಗೊತ್ತು. ಮಠದವರಿಗೆ, ಮಠದ ಅನುಯಾಯಿಗಳಿಗೆ ಗೊತ್ತಾದರಂತೂ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೋ ಗೊತ್ತಿಲ್ಲ. ನೇರವಾಗಿ ತಮ್ಮ ಬಳಿಯೇ ಕೇಳಿ ನಿಷ್ಕರ್ಷೆ ಮಾಡಿಕೊಳ್ಳಬಹುದಿತ್ತು ಎನ್ನುತ್ತಾರೇನೋ? ನನಗೂ ಇದನ್ನೆಲ್ಲ ಬರೆಯಬಾರದು ಅಂತಲೇ ಇತ್ತು. ಆದರೂ ಬರೆದುಬಿಟ್ಟೆ.